ಅಂದು ೧೯೬೫ ರಲ್ಲಿ ಕನ್ನಡ ಚಿತ್ರರಂಗದಲ್ಲಿ ’ಸರ್ವಜ್ಞ ಮೂರ್ತಿ’ ಎಂಬ ಚಿತ್ರ ತಯಾರಾಗಿತ್ತು. ೪೬ ವರ್ಷಗಳ ನಂತರ ’ಸರ್ವಜ್ಞ ಮತ್ತೊಮ್ಮೆ ಹುಟ್ಟಿ ಬಾ’ ಎಂದು ಮಾತೃಭೂಮಿ ಕ್ರಿಯೇಷನ್ಸ್ ಹೇಳುತ್ತಿದೆ. ಸುಮಾರು ೩೦೦ ಸರ್ವಕಾಲಿಕ ಸರ್ವಜ್ಞ ವಚನಗಳನ್ನು ಈ ಚಿತ್ರದಲ್ಲಿ ಉಪಯೋಗಿಸುವುದಾಗಿ ನಿರ್ಮಾಪಕರಾದ ನಾಗರತ್ನ ಶಿವಕುಮಾರ್ ತಿಳಿಸಿದ್ದಾರೆ. ಈ ಚಿತ್ರಕ್ಕೆ ಕತೆ, ಚಿತ್ರಕತೆ, ನಿರ್ದೇಶನವನ್ನು ಶಿವಕುಮಾರ್ .ಎಸ್ ಹೊತ್ತುಕೊಂಡಿದ್ದಾರೆ. ಈ ಹಿಂದೆ ಇವರು ’ಗಗನಸಖಿ’ ಎಂಬ ಚಿತ್ರವನ್ನು ನಿರ್ದೇಶಿದವರು.
’ಸರ್ವಜ್ಞ ಮತ್ತೊಮ್ಮೆ ಹುಟ್ಟಿ ಬಾ’ ಚಿತ್ರಕ್ಕೆ ಈಗಾಗಲೇ ಹಾಡುಗಳನ್ನು ಸಂಗೀತ ನಿರ್ದೇಶಕ ರಾಜಭಾಸ್ಕರ್ ಸಿದ್ಧಪಡಿಸಿದ್ದು, ಅವುಗಳನ್ನು ಕೆಲವು ಧರ್ಮಗುರುಗಳಿಗೆ ಕೇಳಿಸಿ ಅವರ ಅಭಿಪ್ರಾಯವನ್ನು ಪಡೆಯಲಾಗಿದೆ. ಈ ಚಿತ್ರದ ಹಾಡುಗಳನ್ನು (ವಚನಗಳನ್ನು ಹೊರತು ಪಡಿಸಿ) ಡಾ. ಬಿ.ಎಸ್. ಸ್ವಾಮಿ ರಚಿಸಿದ್ದಾರೆ, ಅವರೇ ಈ ಚಿತ್ರದ ಸಂಭಾಷಣೆಯನ್ನು ಕೂಡ ಬರೆದಿದ್ದಾರೆ.
ಸರ್ವಜ್ಞನ ಹೆತ್ತವರು, ಬಾಲ್ಯ, ಯವ್ವನ ಹಾಗೂ ಅವರ ತತ್ವಪದಗಳ ಭಂಡಾರದ ಪರಿಚಯ ಈ ಸಿನಿಮಾದಲ್ಲಿ ಆಗುವುದಾಗಿ ನಿರ್ದೇಶಕರು ಹೇಳಿದ್ದಾರೆ. ಚಿತ್ರಕ್ಕೆ ತಲಕಾಡು, ವರುಣಾ ನಾಲೆ, ರಾಣಿಬೆನ್ನೂರು, ಹೈರಾಣಿ ಮಠ, ಹುಬ್ಬಳ್ಳಿಯ ೩ ಸಾವಿರ ಮಠ, ಮೈಸೂರು, ಶೃಂಗೇರಿ, ಗಯಾ, ಕೇದಾರನಾಥ, ಬದರಿನಾಥ, ಕಾಶಿ ಹಾಗೂ ಹಿಮಾಲುದ ತಪ್ಪಲಿನಲ್ಲಿ ಚಿತ್ರೀಕರಣ ಮಾಡಲಾಗಿದ್ದು ಸಂದರ್ಭಕ್ಕೆ ಸರಿಯಾಗಿ ೩೦೦ ವಚನಗಳನ್ನು ಬಳಸಲಾಗುವುದು.
ನಟನಾ ತರಬೇತಿಯ ಶಾಲೆಯಲ್ಲಿ ಕಲಿತ ಹೊಸ ಪ್ರತಿಭೆಗೆ ಕೇಂದ್ರ ಪಾತ್ರವನ್ನು ಹುಡುಕುತ್ತಿದ್ದಾರೆ. ಶ್ರೀನಿವಾಸ ಮೂರ್ತಿ, ಪವಿತ್ರಾ ಲೋಕೇಶ್, ತಾರಾ ಹಾಗೂ ಇನ್ನಿತರರು ತಾರಾಗಣದಲ್ಲಿದ್ದಾರೆ. ಈ ಚಿತ್ರಕ್ಕೆ ಸ್ವಾಮಿಯವರ ಸಂಕಲನ, ಮುತ್ತುರಾಜ್ ಅವರು ಛಾಯಾಗ್ರಹಣ ಒದಗಿಸಲಿದ್ದಾರೆ.
ಸದ್ಯದಲ್ಲೇ ಈ ಚಿತ್ರ ಪ್ರಾರಂಭವಾಗಲಿದ್ದು ಈ ವರ್ಷದ ಗೌರಿ ಗಣೇಶ ಹಬ್ಬದ ಸಮಯಕ್ಕೆ ಬಿಡುಗಡೆ ಮಾಡುವ ಆಲೋಚನೆಯಲ್ಲಿದ್ದಾರೆ ನಿರ್ದೇಶಕ ಶಿವಕುಮಾರ್.
ಮಾಹಿತಿಗಾಗಿ - ೧೯೬೬ ರಲ್ಲಿ ನಿರಂಜನ ಚಿತ್ರದ ಅಡಿಯಲ್ಲಿ ಆರೂರು ಪಟ್ಟಾಭಿಯವರ
ನಿರ್ದೇಶನದಲ್ಲಿ ನರೇಂದ್ರ ಬಾಬು ಅವರು ’ಸರ್ವಜ್ಞ ಮೂರ್ತಿ’ ಎಂಬ ಚಿತ್ರವನ್ನು ತಯಾರಿಸಿದ್ದರು. ಡಾ. ರಾಜ್ಕುಮಾರ್. ಹರಿಣಿ, ವರದರಾಜ್, ಉದಯಕುಮಾರ್, ಅಶ್ವಥ್, ಮೈನಾವತಿ, ಢಿಕ್ಕಿ ಮಾಧವರಾವ್, ಕೃಷ್ಣಶಾಸ್ತ್ರಿ ಹಾಗೂ ಇನ್ನಿತರರು ತಾರಾಗಣದಲ್ಲಿದ್ದರು.